ನಿಜಬುದ್ಧ

ಹಿಂದೊಮ್ಮೆ ಬುದ್ಧ ತನ್ನೊಲವ ಶಿಷ್ಯನ ಕೂಡ
ಮಾತನಾಡುತಲಿರಲು ಸೃಷ್ಟಿಸ್ಥಿತಿಲಯ ವಿಷಯ,
ಆನಂದ ಪ್ರಶ್ನಿಸಿದ “ಗುರುದೇವ, ಹೃದಯದಲಿ
ತೊಡಕುತಿದೆ-ಸಂದೇಹ-ಕೇಳುವೊಡೆ-ಹೇಳುವೆನು!”
ಬುದ್ಧದೇವನು ಆಗ ಚಂದ್ರಮನ ಎಳೆನಗುವ   ೫
ನಕ್ಕು ಪೇಳಿದನಿಂತು – “ಆನಂದ, ಅಂತಹುದು
ಸಂದೇಹವೇನಿಹುದು? – ಮನವ ಮುರಿವಂತಹುದು!
ಅರಿತಿದ್ದರದಕಾನು ಉತ್ತರವ ಹೇಳುವೆನು”
“ಗುರುದೇವ! ಜೀವನದಿ ಎಲ್ಲರೊಡನಾಡುತಲಿ
ಕಾಮಕ್ರೋಧದ ಕ್ರೂರ ಅಲೆಗಳಪ್ಪಳಿಸಿದರು   ೧೦
ಕಲ್ಬಂಡೆಯಂತಿರುವ ಯೋಗವೇ ಮೇಲಹುದೊ?
ಮೇಣ್, ಜಗಕೆ ದೂರಾಗಿ ಜ್ಞಾನಪಡೆವುದು ಮೇಲೊ?”
“ಆನಂದ, ಸಂದೇಹ ತಿಳುಹಿದುದೆ ಮೇಲಾಯ್ತು!
ನಾನು ಜಗವನೆ ತೊರೆದು ದೂರ ಕಾಡನು ಸೇರಿ
ಬುದ್ಧನಾದುದು ನಿನಗೆ ಅರಿತಿಹುದು …..ಎನಗಲ್ಲಿ,   ೧೫
ಕಾನನದಿ ಮಾಯೆಗಳು ಬಂಧನಗಳಿರಲಿಲ್ಲ!
ರಾಹುಲ ಯಶೋಧರರ ಮಾಯೆಯನು ಒಡೆಯಲಿಕೆ
ಕಾಡಿಗೋಡಿದೆ ನಾನು! – ಅದು ಹಿರಿಮೆಯೇನಲ್ಲ!
ಪತ್ನಿ ಪುತ್ರರ ಕೂಡ ನಿಂತು ತನ್ನನು ಗೆಲುವ
ಯೋಗವೇ ಮೇಲಹುದು! ಬುದ್ಧನಾದರು ಮತ್ತೆ   ೨೦
ಅರಿತುದನು ಬಿತ್ತಲಿಕೆ ಜನತೆಯೇನೆಲನೆಮಗೆ!
ಜನತೆಯೊಡಲಲಿ ಹುಟ್ಟಿ, ಜನತೆ ಮಡಿಲಲಿ ಬೆಳೆದು,
ಜನತೆಯೆಡೆಯೇ ಉಳಿದು, ಜನತೆಯಡಿ ಮುಂದೊಯ್ವ
ಜ್ಞಾನ ಕರ್ಮಿಯು ಬುದ್ಧ! – ಮುಂದೆ ಬರುವವನವನು!
ಹಗಲು ಹುಟ್ಟುವ ಮುನ್ನ ಅರುಣನಿಣುಕುವ ಹಾಗೆ   ೨೫
ಮುಂದೆ ಜನಿಸುವ ಅವನ ಆಗಮನ ಸೂಚಿಸಲು
ನಾಬಂದೆ! ಆನಂದ- ಈಗ ನಿನಗರಿವಾಯ್ತೆ?
ಜಗದ ನಿಜವನು ಅರಿತ ನಿಜಬುದ್ಧ ಬರುತಿಹನು!
ಜಗವ ನಿಜದಲಿ ನಡೆಪ ಆನಂದ ನನಗಿಲ್ಲ-
ಆತನಿಗೆ ಮೀಸಲದು!”  ಆನಂದ ನಡುವಿನಲಿ   ೩೦
ಬಾಯಿಟ್ಟು ಪ್ರಶ್ನಿಸಿದ, “ಗುರುದೇವ, ಆತನನು
ವರ್ಣಿಪಿರ? – ಎಂತಿರುವ ಆ ಬುದ್ಧ-ನಿಜಬುದ್ಧ?
ಜಗದ ನಡೆನುಡಿಬೆರೆತ, ಜಗದ ಸತ್ಯವನರಿತ
ಜಗದ ಕೂಸಾಬುದ್ಧ ಎಲ್ಲಿ ಜನಿಸಿಹನವನು?”
ಬುದ್ಧ ನಸುನಕ್ಕಿಂತು ಪೇಳಿದನು ಉತ್ತರವ-   ೩೫
“ನಡುವಿಂದ ಮೊಳಕಾಲವರೆಗಿಳಿವ ಬಿಳಿವಸ್ತ್ರ
ತನ್ನ ಕೈಯಿಂ ತಾನೆ ನೂತುನೇದುದು ಖಾದಿ!
ಮೇಲ್ಹೊದಿಕೆ-ಮತ್ತೊಂದು-ಬಿಳಿಯ ಖಾದಿಯ ಚೌಕ
ವಿಶ್ವದಿಗ್ವಜಯಕ್ಕೆ ಹೊರಟ ಸನ್ಯಾಸಿಯವ,
ಕೈಯಲ್ಲಿ ದಂಡವಿದೆ-ಮುಖಬತ್ತಿ ಬಾಡಿಹುದು   ೪೦
ಯೌವನದ ತೇಜವಿದೆ-ಬ್ರಹ್ಮಚರ್‍ಯದ ತೇಜ!
ಮಡದಿಯನು ಮಾತೆಯೊಲು ಕಾಣವವನಾ ತೇಜ!
ಹೃಯದಲಿ ಹಿರಿಕೆಚ್ಚು-ಸ್ವಾತಂತ್ರ್‍ಯದಾ ಕಿಚ್ಚು
ಅದೊ ಆತ ಬರುತಲಿಹ ಈ ಎಡೆಗೆ ನೋಡಲ್ಲಿ
ಭಾರತಿಯ ಹಿರಿಯಮಗ-ಕಿರಿಯಮಕ್ಕಳು ನೋಡು   ೪೫
ಎನಿತು ಜನ ದಂಡಾಗಿ ಹಿಂದೆ ಸಾಗುತಲಿಹರು-
ಬುದ್ಧನವ! – ನಿಜಬುದ್ಧ! ನಾನವನ ಜನ್ಮವನು
ಸೂಚಿಸಲು ಬಂದಿದ್ದ ಮುಂಜಾನೆ! – ಆನಂದ!”
-ಅಷ್ಟರಲೆ ಕನಸೊಡೆದು ಎಚ್ಚೆತ್ತು ನೋಡಿದೆನು
ಸೆರೆಮನೆಯ ಹೊರಬದಿಗೆ ಕಾವಲಿನ ಪೋಲೀಸ   ೫೦
ನಡೆದ ಬೂಟ್ಸಿನ ಸದ್ದು ರಾತ್ರಿಯಾ ಕಡುಮೌನ
ಭೇದಿಸುತ ಬರುತಿತ್ತು- ಸುಂದರ ದಿಗಂತದಲಿ
ನಕ್ಷತ್ರನೂರ್ಲಕ್ಷ ಸ್ವಾತಂತ್ರ್‍ಯಸಿರಿಯಲ್ಲಿ
ನಕ್ಕುನಲಿಯುತಲಿರಲು, ಸೆರೆಮನೆಯ ಒಳಬದಿಯ
ಗಾಳಿ ಸುಂಯ್ಗುಡುತಿತ್ತು! ಕಂಗಳಲಿ ನೀರೂರಿ   ೫೫
ಗೋಡೆಯಲಿ ಮಸಿಯಿಂದ ನಾಬರೆದ ಚಿತ್ರದೆಡೆ
ಕಣ್ತಿರುವಿ ಕೈಮುಗಿದೆ ಗಾಂಧಿಗೆ ಮಹಾತ್ಮನಿಗೆ!
– “ನಿಜಬುದ್ಧ! ಭಾರತಿಯ ಹಿರಿಮಗ-ನಮಗೆಲ್ಲ
ಆತ್ಮ ಸ್ವಾತಂತ್ರ್‍ಯವನು ಸಾಧಿಸುವ ಮಂತ್ರವನು
ಬೋಧಿಸಿದ ನಿಜಗುರುವೆ! – ನಿನಗೆ ಚಿರಜಯಮಕ್ಕೆ!”   ೬೦
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ಬೇವು-ಬೆಲ್ಲ
Next post ಪ್ರಯೋಗ ಶಾಲೆ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys